Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ವಿಮರ್ಶೆ»ಪತ್ರಕರ್ತ ಸಿ ಎಸ್‌ ಚರಣ್‌ರ ಕಥಾಸಂಕಲನ `ಆಂಟಿ ಕ್ಲಾಕ್‌’ಗೆ ಬರೆದಿದ್ದೇನೆ ನನ್ನ ಮೊದಲ ಮುನ್ನುಡಿ!
ವಿಮರ್ಶೆ

ಪತ್ರಕರ್ತ ಸಿ ಎಸ್‌ ಚರಣ್‌ರ ಕಥಾಸಂಕಲನ `ಆಂಟಿ ಕ್ಲಾಕ್‌’ಗೆ ಬರೆದಿದ್ದೇನೆ ನನ್ನ ಮೊದಲ ಮುನ್ನುಡಿ!

ಬೇಳೂರು ಸುದರ್ಶನBy ಬೇಳೂರು ಸುದರ್ಶನJuly 26, 2015Updated:May 19, 2025No Comments4 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಇತ್ತೀಚೆಗಷ್ಟೆ ಆನ್‌ಲೈನ್ ಸಂವಹನದ ಮೂಲಕ ಪರಿಚಯವಾಗಿರುವ ಪತ್ರಕರ್ತ ಮತ್ತು ಬೈಸಿಕಲ್ ಅಭಿಯಾನಿ ಶ್ರೀ ಸಿ ಎಸ್ ಚರಣ್‌ರ ಈ ಕಥಾ ಸಂಕಲನಕ್ಕೆ ನಾನೇ ಮುನ್ನುಡಿ ಬರೆಯಬೇಕೆಂದು ಅವರು ನಿರ್ಧರಿಸಿದ್ದು ನನ್ನ ಡಿಜಿಟಲ್ ಫುಟ್‌ಪ್ರಿಂಟ್‌ಗಳನ್ನು ಗಮನಿಸಿ ಎಂಬುದು ಅಚ್ಚರಿಯ ಮತ್ತು ಅಪರೂಪದ ವಿಷಯ.

anti clock 1

ಯಾವುದೇ ಒಬ್ಬ ವ್ಯಕ್ತಿಯ ಆನ್‌ಲೈನ್ ಚಟುವಟಿಕೆಗಳನ್ನು ಗಮನಿಸಿ, ವಿಶ್ಲೇಷಿಸಿ ಅವನ/ಳ ನಡೆನುಡಿಗಳನ್ನು, ಇಷ್ಟಾನಿಷ್ಟಗಳನ್ನು, ಗುಣಾವಗುಣಗಳನ್ನು ಒಂದಷ್ಟರಮಟ್ಟಿಗೆ ಗುರುತಿಸಲು ಸಾಧ್ಯವಿದೆ. ಇದನ್ನು ನಾನೇ ಸ್ವತಃ ಅನುಭವದಿಂದ ಕಂಡುಕೊಂಡಿದ್ದೇನೆ. ಆದರೆ ಈ ವಿಶ್ಲೇಷಣೆಯು ವಸ್ತುನಿಷ್ಠವೂ, ಸತ್ಯಕ್ಕೆ ಹತ್ತಿರವೂ ಆಗಿರಬೇಕಾದರೆ, ಹುಡುಕುವವರ ಅನುಭವ ಮಾಗಿರಬೇಕು. ಗೂಗಲ್‌ನಲ್ಲಿ ಮೊದಲ ಹಂತದ್ದಲ್ಲ, ಎರಡು – ಮೂರು – ನಾಲ್ಕನೇ ಹಂತದವರೆಗೆ ವಿವಿಧ ಬಗೆಯ ಹುಡುಕಾಟದ ಪದಗಳನ್ನು, ಪದಗುಚ್ಛಗಳನ್ನು ಹಾಕಿ ರಾತ್ರಿ-ಹಗಲೆನ್ನದೆ ಸಂಶೋಧಿಸಬೇಕು. ಜಂಕ್ ಯಾವುದು, ಸತ್ಯ ಯಾವುದು ಎಂಬುದನ್ನು ವಿಶ್ಲೇಷಿಸುವ ಪರಿಣತಿ ಬೇಕು. ನೋಡುವವರಿಗೆ ಇದೆಲ್ಲ ಸಮಯ ಹಾಳು ಮಾಡುವ ಕೆಲಸ ಎಂದು ಅನ್ನಿಸುತ್ತದೆ. ಆದರೆ ಕೊನೆಗೊಮ್ಮೆ ವಾಸ್ತವಕ್ಕೆ ಹತ್ತಿರವಾದ ಅಂಶಗಳು ಪತ್ತೆಯಾದಾಗ ದಿನಗಟ್ಟಳೆ ನಿದ್ದೆ ಮಾಡುವ ಉತ್ಸಾಹ ಬರುತ್ತದೆ!

ಕಳೆದ ೧೭ ವರ್ಷಗಳಲ್ಲಿ ಇಂಥ ಬಗೆಬಗೆಯ ಡಿಜಿಟಲ್ ತನಿಖೆಯಿಂದ ನಾನು ಹಲವು ಹಣಕಾಸು, ರಾಜಕೀಯ ಹಗರಣಗಳನ್ನು ಪತ್ತೆ ಮಾಡಿದ್ದೇನೆ; ಆತುರದಿಂದ ಮೋಸ ಹೋಗುವವವರಿಗೆ ಎಚ್ಚರಿಕೆ ನೀಡಿದ್ದೇನೆ. ಬೇರೊಬ್ಬನನ್ನು ಮದುವೆಯಾದ ಪ್ರೇಯಸಿಯನ್ನು ಬೆದರಿಸುತ್ತಿದ್ದ ಭಗ್ನಪ್ರೇಮಿಯನ್ನು ಕರೆದು ಮಾತಾಡಿಸಿ ಸಮಾಧಾನಿಸಿದ್ದೇನೆ; ಅಮಾಯಕನೆಂಬ ಮುಖವಾಡ ಹೊತ್ತ ವ್ಯಕ್ತಿಗಳನ್ನು ಬಯಲಿಗೆ ಎಳೆದಿದ್ದೇನೆ. ಬ್ಯಾಂಕಿನ ದತ್ತಾಂಶಗಳು ಸೋರಿದ್ದನ್ನು ಹುಡುಕಿಕೊಟ್ಟಿದ್ದೇನೆ; ಮೂಲ ವಿಜ್ಞಾನಿ-ಸಂಶೋಧಕರನ್ನು ಸಂಪರ್ಕಿಸಿಯೇ ಬ್ಲಾಗ್‌ಗಳನ್ನು ಬರೆದಿದ್ದೇನೆ. ಇವೆಲ್ಲವನ್ನೂ ನಾನು ನನ್ನದೇ ಆದ್ಯತೆ ಮತ್ತು ಅಗತ್ಯಗಳಿಗಾಗಿ ಮಾಡಿರುವುದರಿಂದ ಸಾರ್ವಜನಿಕ ಪ್ರಕಟಣೆ ಮಾಡಿಲ್ಲ, ಅಷ್ಟೆ! ಬಹುಶಃ ಈ ಮುನ್ನುಡಿಯಲ್ಲಿ ಇವೆಲ್ಲ ಬೀಜವಾಕ್ಯಗಳಂತೆ ಕಾಣಬಹುದು. ಹಾಗೇ ಓದಿ ಮರೆತುಬಿಡಿ! ಸುದ್ದಿಮನೆಯಲ್ಲಿ ಕುಳಿತು ಪತ್ರಿಕಾವೃತ್ತಿಯಲ್ಲಿ ತೊಡಗಿರುವ ಚರಣ್, ನಾನು ಅನುಭವಿಸಿದಂಥ ಹತ್ತು ಹಲವು ಸಂದರ್ಭಗಳನ್ನು ಕಥೆಗಳ ಮೂಲಕ ಹೆಣೆದಿರುವುದರಿಂದಲೇ ನನಗೆ ಮುನ್ನುಡಿ ಬರೆಯುವ ಅರ್ಹತೆ ಬಂದಿದೆ ಎಂದುಕೊಂಡಿದ್ದೇನೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ಚರಣ್ ಬರೆದ ಕಥೆಗಳು ಭಾರತೀಯ ಸಮಾಜವು ದಾಟುತ್ತಿರುವ ಆಧುನಿಕತೆಯ ಹೊಸ್ತಿಲಿನ ಈಚೆಯ ಸನ್ನಿವೇಶಗಳಂತೆ ಕಾಣುತ್ತವೆ. ಪ್ರತಿಯೊಂದು ಕಥೆಯೂ ಒಂದಿಲ್ಲೊಂದು ಬಗೆಯ ಡಿಜಿಟಲ್ ಅವತಾರಗಳನ್ನು ಬೆಸೆದುಕೊಂಡೇ ಬೆಳೆಯುತ್ತದೆ. ಈ ಕಥೆಗಳಲ್ಲಿ ಡಿಜಿಟಲ್ ಬದುಕಿನ ದೃಶ್ಯಗಳಿವೆ; ಐಟಿ ರಂಗದ ತುಮುಲಗಳಿವೆ; ಯಾಂತ್ರಿಕವಾದ ಸಂಬಂಧಗಳಿವೆ; ಚಾಟ್‌ಗಳಿವೆ; ಬಿರುಕುಬಿಟ್ಟ ಮನೆಗಳಿವೆ, ಮನಗಳಿವೆ.

ಈ ಸಂಕಲನದಲ್ಲಿ ಇರುವ ಅತಿ ಹಳೆಯ ಕಥೆ `ಕೈನಿ, ಸ್ಕೂಟಿ ಮತ್ತು ಸ್ಯಾಮ್.’ ಉಳಿದ ಕಥೆಗಳೆಲ್ಲವೂ ೨೦೧೦ರಿಂದೀಚೆಗೆ ಬರೆದವು. `ಕೈನಿ…’ ಕಥೆಯು ಇಂಟರ್‌ನೆಟ್ ಆರಂಭದ ದಿನಗಳ ಕಥೆಯಾಗಿದ್ದರಿಂದ ಎಸ್‌ಟಿಡಿ ಬೂತಿನಲ್ಲಿ ಆರಂಭವಾಗುತ್ತದೆ. ದೂರವಾಣಿಯನ್ನು ಆಧರಿಸಿದ ಈ ಕಥೆಯಲ್ಲಿ ಸಂಕೀರ್ಣತೆಯ ಸುಳಿವೂ ಇಲ್ಲ. ಒಂದು ಚಿಕ್ಕ ತಮಾಷೆಯಂತೆ ಕಥೆ ನಡೆಯುತ್ತದೆ. `ಸಮಯ ಸಾಧಕ’ ಕಥೆಯೂ ಇದೇ ರೀತಿ ಬ್ಯಾಂಕಿನಲ್ಲಿ ಕ್ಯೂ ನಿಲ್ಲಲು ಪಡೆಯಬೇಕಾದ ಟೋಕನ್‌ನ ಸುತ್ತಮುತ್ತ ನಡೆಯುತ್ತದೆ. `ಐದು ಯೆಸ್, ಒಂದು ನೊ’ ಕಥೆಯು ಜಪಾನೀ ಶಿಸ್ತಿನ ಪಂಚಸೂತ್ರಗಳನ್ನು ತಪ್ಪು ಸನ್ನಿವೇಶಕ್ಕೆ ಅಳವಡಿಸಿದರೆ ಉಂಟಾಗುವ ಅಪಾಯಗಳನ್ನು ಬಿಂಬಿಸುತ್ತದೆ. ಅದೇ ಪಂಚಸೂತ್ರದ ‘ಸೀಟನ್ – ಎ ಪ್ಲೇಸ್ ಫಾರ್ ಎವೆರಿಥಿಂಗ್, ಎಂಡ್ ಎವೆರಿಥಿಂಗ್ ಇನ್ ಇಟ್ಸ್ ಪ್ಲೇಸ್’ ಎಂಬ ಸೂತ್ರವನ್ನು ಅರಿತರೆ ಇಂಥ ಅಪಾಯಗಳನ್ನು ತಪ್ಪಿಸಿಕೊಳ್ಳಬಹುದು ಎಂಬಲ್ಲಿಗೆ ಕಥೆ ಮುಗಿಯುತ್ತದೆ.

ಇಡೀ ಸಂಕಲನದಲ್ಲಿ ತುಂಬಾ ಗಮನ ಸೆಳೆಯುವ ಮತ್ತು ಭಾವುಕ ಕ್ಷಣಗಳನ್ನು ಹೆಚ್ಚುಪ್ರಮಾಣದಲ್ಲಿ ದಾಖಲಿಸಿರುವ ಕಥೆ `ಆಂಟಿ ಕ್ಲಾಕ್’. ಅಪಾರ್ಟ್‌ಮೆಂಟ್‌ಗಳ ನಡುವೆಯೇ ಸ್ವಂತಿಕೆಯಿಂದ ತನ್ನ ಮನೆಯನ್ನು ಉಳಿಸಿಕೊಂಡಿದ್ದ ಜಾಕ್ವೆಲಿನ್ ಎಂಬ ಅಜ್ಜಿಯ ಒಂಟಿ ಬಾಳಿನಲ್ಲಿ ರಘು ಮತ್ತು ಜ್ಯೋತಿ ದಂಪತಿಯ ಪ್ರವೇಶ ತರುವ ಬದಲಾವಣೆಗಳನ್ನು ಕಥೆ ತುಂಬಾ ಸರಳವಾಗಿ ಚಿತ್ರಿಸಿದೆ. ಇಲ್ಲಿ ಬರುವ ಉಲ್ಟಾಪಲ್ಟಾ ತಿರುಗುತ್ತಲೇ ಸರಿಯಾದ ಸಮಯ ತೋರಿಸುವ ಗಡಿಯಾರದ ಕಲ್ಪನೆಯು ವಾಸ್ತವವೂ ಹೌದು, ರಮ್ಯ ಕಲ್ಪನೆಯೂ ಹೌದು. ಹೀಗೆ ಚಿಕ್ಕ ತಾಂತ್ರಿಕ ಬದಲಾವಣೆಯು ಬದುಕಿನ ಘಟನೆಗಳನ್ನೇ ಬದಲಿಸುತ್ತಿದೆಯೇ ಎಂಬಂತೆ ಬೆಳವಣಿಗೆಗಳು ನಡೆಯುವುದು ಇಡೀ ಕಥೆಯ ಸ್ವಾರಸ್ಯವನ್ನು ಚೆನ್ನಾಗಿ ಉಳಿಸಿಕೊಂಡು ಹೋಗಿದೆ. ಸರ್ರಿಯಲಿಸಂನ ಅಂಶಗಳ ನಡುವೆಯೂ ವಾಸ್ತವದಿಂದ ಬೇರೆಯಾಗದ ಈ ಕಥೆಯನ್ನು ಸಂಕಲನದ ಅತ್ಯುತ್ತಮ ಕಥೆ ಎಂದು ಭಾವಿಸಿದ್ದೇನೆ.

ನಾನು ಮೊದಲೇ ಹೇಳಿದ ಡಿಜಿಟಲ್ ಫುಟ್‌ಪ್ರಿಂಟ್‌ನಿಂದ ಮನುಷ್ಯರನ್ನು ಅಳೆಯುವ ಕಥೆಯೂ ಇಲ್ಲಿದೆ. `ತ್ರಿಪದಿ’ ಕಥೆಯಲ್ಲಿ ಒಂದೇ ಹೆಸರಿನ ಮೂರು ಐಡೆಂಟಿಟಿಗಳು ಪರಸ್ಪರ ಸಂಪರ್ಕಕ್ಕೆ ಬಂದು ನಡೆಯುವ ಘಟನೆಗಳು ಮಜಾ ಕೊಡುತ್ತವೆ. ಇಲ್ಲಿ ವಸ್ತುಶಃ `ಫುಟ್‌ಪ್ರಿಂಟ್’ (ಪಾದದ ಫೋಟೋ) ಕಥಾವಸ್ತು ಆಗಿರುವುದು ವಿಶೇಷ. ಇಲ್ಲಿ ಸೈಕಾಲಜಿ, ಆನ್‌ಲೈನ್ ಚಹರೆ, ನೈಜ ಪಾತ್ರಗಳ ಸಂಭಾಷಣೆ, ಆನ್‌ಲೈನ್ ಚಾಟ್ ಎಲ್ಲವೂ ಮಿಶ್ರಣಗೊಂಡು ಕಥೆಗೊಂದು ಸಂಕೀರ್ಣತೆ ತಂದುಕೊಟ್ಟಿವೆ. ಆಂಟಿ ಕ್ಲಾಕ್‌ನ ದುರಂತ ಅಂತ್ಯದ ಬದಲು ಇಲ್ಲಿ ಕುತೂಹಲ ಕೆರಳಿಸುವ ಕೊನೆಯಿದೆ.

`ಮದ್ರಾಸಿನಸಿದ್ರಾಮ’ (ಹಿಂದುಮುಂದಾಗಿ ಓದಿದರೂ ಅದೇ!) ಕಥೆಯು ಶೀರ್ಷಿಕೆಯಿಂದಲೇ ಕಥಾಸೂತ್ರವನ್ನು ಬಿಚ್ಚಿಡುತ್ತದೆ. ಗಣಿತದ ಮೇಸ್ಟ್ರು ನೀಡಿದ ಸವಾಲನ್ನು ಎದುರಿಸಲು ಮದ್ರಾಸಿಗೆ ಹೋಗುವ ಸಿದ್ರಾಮನ ಪಾಡು ಮತ್ತು ಮೇಸ್ಟ್ರು ಕೊನೆಯಲ್ಲಿ ನೀಡುವ ಸಿಮಿಟ್ರಿಯ ಶಾಕ್ – ಇದು ಕಥೆಯ ವಿಶೇಷ.

ಇನ್ನುಳಿದ ಕಥೆಗಳೂ ಹೀಗೆಯೇ ಹಲವು ತಾಂತ್ರಿಕ ಸನ್ನಿವೇಶಗಳ ಸುತ್ತ ಬೆಳೆಯುತ್ತವೆ. ಈ ಕಥೆಗಳನ್ನು ನಾನು ಪರಿಚಯಿಸುವುದಕ್ಕಿಂತ ನೀವೇ ಓದಿ, ಆನಂದಿಸಿ!

ಚರಣ್ ವೃತ್ತಿಯಲ್ಲಿ ಪತ್ರಕರ್ತರು; ಪ್ರವೃತ್ತಿಯಲ್ಲಿ ಬೈಸಿಕಲ್ ಯಾನಿ-ಅಭಿಯಾನಿ. ಅವರ ಬದುಕಿನ ಈ ಅಂಶಗಳು ಕಥೆಗಳಲ್ಲಿ ಕಾಣಬರುವುದಿಲ್ಲ. ಕಥೆಗಳನ್ನು ಕೇವಲ ಕಥೆಗಳಾಗಿಯೇ ಬರೆಯಬೇಕು ಎಂಬ ಉದ್ದೇಶ ಅವರಿಗೆ ಇರಬಹುದು. ಇದು ತಪ್ಪೇನಲ್ಲ; ಜಪಾನೀ ಭಾಷೆಯ ಖ್ಯಾತ ಲೇಖಕ ಹರೂಕಿ ಮುರಾಕಾಮಿ ಒಬ್ಬ ಮ್ಯಾರಥಾನ್ ಓಟಗಾರ ಎಂದು ನನಗೆ ಗೊತ್ತಾಗಿದ್ದೇ ಇತ್ತೀಚೆಗೆ! ಅವರು ಮ್ಯಾರಥಾನ್ ಓಟದ ಬಗ್ಗೆ ಪ್ರತ್ಯೇಕ ಪುಸ್ತಕ ಬರೆದಿದ್ದಾರೆಯೇ ಹೊರತು, ಕಥೆಗಳಲ್ಲಿ ಅದನ್ನು ತಂದಿಲ್ಲ (ಆದರೆ ಕಥೆಗಾರನಾಗಿ ಕಥೆಗಾರ ಇರುವ ಪಾತ್ರಗಳನ್ನೂ ಸೃಷ್ಟಿಸಿದ್ದಾರೆ).

ಇಲ್ಲಿನ ಕಥೆಗಳು ಅಚ್ಚುಕಟ್ಟಾದ ಕಥಾಹಂದರವನ್ನು ಹೊಂದಿವೆ. ಮೊದಲ ಸನ್ನಿವೇಶದಿಂದ ಹಿಡಿದು ಕೊನೆಯವರೆಗೆ ಕಥೆ ಹೀಗೆಯೇ ನಡೆಯಬೇಕು ಎಂದು ಲೇಖಕರು ಮೊದಲೇ ನಿರ್ಧರಿಸಿರುವುದರಿಂದ ಹಲವು ಕಥೆಗಳಿಗೆ ಸುಖಾಂತ್ಯವೇ ಇರಬಹುದು ಎಂದು ಊಹಿಸುವುದು ಸುಲಭ. ಹೀಗಿದ್ದೂ, ತಂತ್ರಜ್ಞಾನದ ಇನ್ನೊಂದು ಹರಿವೂ ಈ ಕಥೆಗಳಿಗೆ ಇರುವುದರಿಂದ, ಸಮಸ್ಯೆಯು ಪರಿಹಾರವಾಗುವುದು ಹೇಗೆ ಎಂಬ ಕುತೂಹಲ ಯಾವಾಗಲೂ ಉಳಿದುಕೊಳ್ಳುತ್ತದೆ. `ವಿಂಡೋ ಶಾಪಿಂಗ್’ ಶೀರ್ಷಿಕೆಯೇ ವಾಚ್ಯವಾಗಿದ್ದರೂ ಕಥೆಯ ಕೊನೆ ಹೇಗಾಗಬಹುದು ಎಂದು ಊಹಿಸಲು ಕಷ್ಟವಾಗುತ್ತದೆ.

anti clock 2

ಚರಣ್‌ಗೆ ಆಧುನಿಕ ತಂತ್ರಜ್ಞಾನ ಸಾಧನಗಳು ಪರಿಚಯ ನಿಕಟವಾಗಿದೆ; ಬೆಂಗಳೂರಿನಂಥ ಮಹಾನಗರದಲ್ಲಿ ನಡೆಯುವ ಮನೆಮನೆಯ ಹೊಸ ಕಥೆಗಳನ್ನು ಕಲ್ಪಿಸಿಕೊಳ್ಳುವುದರಲ್ಲಿ ಅವರು ಸಮರ್ಥರು. ಆದ್ದರಿಂದ ಈ ಸಂಕಲನದ ಎಲ್ಲ ಕಥೆಗಳೂ ಸರಿಸುಮಾರು ಒಂದು ಚೌಕಟ್ಟಿನ ಒಳಗೇ ಹೆಣೆದುಕೊಂಡ ನಿರೂಪಣೆಗಳಾಗಿವೆ. ಇಲ್ಲಿ ಕಥೆಯಿದೆ, ಪಾತ್ರಗಳಿ, ಹಂದರವೂ ಇದೆ.

ಈ ಕಥೆಗಳ ಕುರಿತು ರಚನಾತ್ಮಕ ಟೀಕೆಯನ್ನೂ ಮಾಡುವ ಸ್ವಾತಂತ್ರ್ಯವನ್ನು ಹೊಂದಿ ಹೇಳುವುದಾದರೆ: ಚರಣ್‌ರ ಮೊದಲ ಕಥಾ ಸಂಕಲನ ಎಂಬುದು ಈ ಕಥೆಗಳಿಂದಲೇ ಖಚಿತವಾಗುತ್ತದೆ. ಇವರ ಕಥೆಗಳ ಹಲವು ಅಂತ್ಯಗಳು ಕೊಂಚ ಸಿನಿಮೀಯವಾಗಿವೆ. ದೃಶ್ಯಮಾಧ್ಯಮದಲ್ಲಿ ನಿರೀಕ್ಷಿಸುವ ಚಲನೆಗಳೂ ಅಲ್ಲಲ್ಲಿ ಇಣುಕಿವೆ. ಕಥೆಗಳಲ್ಲಿ ಎಲ್ಲ ಮಾಹಿತಿಗಳನ್ನೂ ಹೇಳಬೇಕೆಂಬ ಧಾವಂತದಲ್ಲಿ ಕೆಲವೊಮ್ಮೆ ಕಥೆಗಿಂತ ಮಾಹಿತಿಯೇ ವಿಜೃಂಭಿಸಿದೆ. ಮಾಹಿತಿಯುಗದ ಮಹಿಮೆಯೇ ಇದು! ಹೀಗಾಗಿ ಸಮಕಾಲೀನ ಕಥಾ ನಿರೂಪಣೆಗಳಲ್ಲಿ ಕೆಲವೆಡೆ ನಾವು ನಿರೀಕ್ಷಿಸುವ ಭಾವಸ್ಫುರಣವನ್ನು ಇಲ್ಲಿ ಕಾಣುವುದಿಲ್ಲ. ಹಾಗಂತ ಇದರಿಂದ ಕಥೆಗಳ ಓಟಕ್ಕೇನೂ ಧಕ್ಕೆಯಾಗಿಲ್ಲ.

ಚರಣ್ ಸುದ್ದಿಮನೆಯ ಕಾಯಕದಲ್ಲೇ ಹಲವು ವರ್ಷಗಳನ್ನು ಕಳೆದಿರುವವರು. ಆದ್ದರಿಂದ ಅವರ ಪಾತ್ರಗಳು ದಿನಪತ್ರಿಕೆಗಳಲ್ಲಿ ಬರುವ, ಕಲ್ಪನೆಗಿಂತ ಎಷ್ಟೋ ಪಾಲು ಶಕ್ತಿಯುತವಾದ, ಕೆಲವೊಮ್ಮೆ ಭೀಕರವೂ ಆದ ವಾಸ್ತವವನ್ನು ಹೊಂದುವ ಸಾಧ್ಯತೆಗಳಿದ್ದವು. ಆದರೆ ಯಾಕೋ, ಅವರು ಅಂಥ ಅಸೀಮ ಸಾಧ್ಯತೆಗಳನ್ನು ಪೂರ್ತಿಯಾಗಿ ಬಳಸಿಲ್ಲ. ಇದಕ್ಕೆ ಅವರು ಹಾಕಿಕೊಂಡಿರುವ ಬರವಣಿಗೆಯ ಸಂಯಮದ ಸೂತ್ರಗಳೇ ಕಾರಣ ಎಂದುಕೊಂಡಿದ್ದೇನೆ.

ಡಿಜಿಟಲ್ ಬದುಕು ತಂದ ಬದಲಾವಣೆಯ ಪ್ರವಾಹದಲ್ಲಿ ನಾವೆಲ್ಲರೂ ಈಜುತ್ತಿದ್ದೇವೆ. ಬದುಕಿನ ಗತಿ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ರಭಸ ಪಡೆದುಕೊಂಡಿದೆ. ಇಂಥ ಸಂದರ್ಭದಲ್ಲಿ ಚರಣ್ ಕೆಲವು ಚಿತ್ರಣಗಳನ್ನು ಕ್ಲಿಕ್ ಮಾಡಿದ್ದಾರೆ. ಖಾಸಗಿ ಬದುಕೆಲ್ಲವೂ ರಿಯಲ್‌ಟೈಂ ಸಾರ್ವಜನಿಕ ಪ್ರಕಟಣೆಯ ಅಂಶಗಳಾಗಿರುವ ಈ ದಿನಗಳಲ್ಲಿ ಇಂಥ ಕಥೆಗಳ ಹಿಂದಿನ ಆಶಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಬದುಕೆಂದರೆ ಬರೀ ಅರ್ಬನ್ ದಿನಚರಿಯೆ? ಕೇವಲ ಕೆಲಸವೆ? ಆನ್‌ಲೈನ್ ಚಾಟೆ? ಸಂಬಂಧಗಳೆಂದರೆ ಕೇವಲ ಹಣಕಾಸಿಗೆ ಸಂಬಂಧಿಸಿದ್ದೆ? – ಹೀಗೆ ಹಲವು ಪ್ರಶ್ನೆಗಳನ್ನು ಈ ಕಥೆಗಳು ಎತ್ತುತ್ತವೆ.

ಮೊದಲ ಕಥಾ ಸಂಕಲನದಲ್ಲಿ ಇರಬಹುದಾದ ಎಲ್ಲ ಒಳಿತು ಕೆಡುಕುಗಳನ್ನು ಅರಿತೇ ಸಾರ್ವಜನಿಕ ಪ್ರಕಟಣೆಗೆ ಮುಂದಾಗಿರುವ ಚರಣ್‌ಗೆ ಅಭಿನಂದನೆಗಳು. ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಹೊಂದಿರುವ ಚರಣ್ ಮುಂದಿನ ದಿನಗಳಲ್ಲಿ ಇನ್ನಷ್ಟು ಗಾಢ ಅನುಭವ ಕೊಡುವ ಕಥೆಗಳನ್ನು ಬರೆಯುತ್ತಾರೆ, ಅವುಗಳಲ್ಲಿ ಚೊಚ್ಚಲ ಪುಸ್ತಕದ ಋಣಾತ್ಮಕ ಅಂಶಗಳಿರುವುದಿಲ್ಲ ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು.

– ಬೇಳೂರು ಸುದರ್ಶನ

ಜೂನ್ ೨೦೧೫

ಬೆಂಗಳೂರು

Share. Facebook Twitter Pinterest LinkedIn Tumblr Email
Previous Articleಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
Next Article ಆಪ್ ಅಂದ್ರೆ ಲೈಫಲ್ಲ, ಗ್ಯಾಜೆಟ್ ಅಂದ್ರೆ ಗುರು ಅಲ್ಲ; ಫೇಸ್ಬುಕ್ ಅಂದ್ರೆ ಕ್ರಾಂತಿ ಅಲ್ಲ!
ಬೇಳೂರು ಸುದರ್ಶನ
  • Website

Related Posts

ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)

October 4, 2020

ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      

May 27, 2020

`ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ

October 6, 2019

Comments are closed.

ವಿಮರ್ಶೆ
  • ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)
  • ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      
  • `ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ
  • ‘After I die, cut out my heart and eat it’ (Book Review: Tombstone)
  • `ದ ಸ್ವರ್ವ್’: ಆಧುನಿಕ ಯುರೋಪಿಗೆ ಮುನ್ನುಡಿಯಾದ ಕಾವ್ಯದ ಶೋಧ
  • `ಮ್ಯಾಡ್‌ ಮ್ಯಾಕ್ಸ್‌: ಫ್ಯೂರಿ ರೋಡ್‌’: ಶತಮಾನದ ಸಿನೆಮಾ!
  • `ELLE’ : ಬಾಳಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ? 
  • ಡಿಸೆಂಟಿಂಗ್ ಡಯಾಗ್ನಸಿಸ್‌: ವೈದ್ಯಕೀಯ ರಂಗದ ದುರಾಚಾರ ರೋಗಕ್ಕೆ ವೈದ್ಯರದೇ ಚಿಕಿತ್ಸೆ
  • ಪಿಂಕ್: ಬಾಲಿವುಡ್ ಪಾಪಕರ್ಮಗಳಿಗೆ ಪುಟ್ಟ, ಅಸಂಪೂರ್ಣ ಪ್ರಾಯಶ್ಚಿತ್ತ!
  • ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ | ಈ ಮಹತ್ವದ ಕೃತಿಗಳು ಜಾಲತಾಣದಲ್ಲೂ ಮುಕ್ತವಾಗಿ ಪ್ರಕಟವಾಗಲಿ!
  • ಅಂದು ಶಾಂತ ಕಡಲು, ಇಂದು ಹುಚ್ಚುಹೊಳೆ! : ವಿವೇಕ ಶಾನಭಾಗರ ಕಾದಂಬರಿ ‘ಊರುಭಂಗ’ದ ಇನ್‌ಸ್ಟಂಟ್‌ ವಿಮರ್ಶೆ
  • Climate thriller without Kalashnikov [Book Review: The Sands of Sarasvati by Risto Isomaki]
  • Sacred Plants of India: Marvellous lucidity of Puranic facts [book review]
  • Business Sutra : Desi Sutras for Modern Business [Book review]
  • ಹಲ್ಕಟ್‌ಗಿರಿ ಸ್ಟೋರಿಗೆ ಹೈದರ್‍ರೇ ಯೋಗ್ಯ!
  • ಖಗೋಳ ವೀಕ್ಷಣೆಯ ನೀರವದಲ್ಲಿ ಭೂ-ಗತಕಾಲದ ಹುಡುಕಾಟ : ‘ನಾಸ್ಟಾಲ್ಜಿಯಾ ಫಾರ್ ದ ಲೈಟ್’
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • THE ACCIDENTAL PRIME MINISTER : ಪುಸ್ತಕ ವಿಮರ್ಶೆ: `ಶಾಣ್ಯಾ’ ಸಂಜಯ ಬಾರು; `ಭೋಳ್ಯಾ’ ಡಾ||ಸಿಂಗ್‌!
  • `ಉಳಿದವರು ಕಂಡಂತೆ’ : ವೃತ್ತಿಪರ, ದಕ್ಷ ಮತ್ತು ಸಮಾಜ-ಸನ್ನಿವೇಶದ ಹೊಣೆಯರಿತ ನಿರ್ಮಾಣ
  • ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’
  • ‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ
  • Musical journey of a different kind
  • BOOK REVIEW [A FORT OF NINE TOWERS] : This Kabuliwala weaves a blood-chilling story
  • ಚಿಮಾಮಂಡ ಎನ್ಗೋಜಿ ಅದೀಚೆ: ಅಪ್ಪಟ ದೇಸಿ ಕತೆಗಾರ್ತಿ
  • ನಾನ್‌ಜಿಂಗ್ ! ನಾನ್‌ಜಿಂಗ್!! : ಲೈಫು ಇಷ್ಟೇನಾ?
  • ಹಾರರ್, ಸಸ್ಪೆನ್ಸ್ ಥ್ರಿಲ್ಲರ್‌ಗಳ ಹೊಸ ಹೀರೋ : ನಿರ್ದೇಶಕ ಬ್ರಾಡ್ ಆಂಡರ್‌ಸನ್
  • ನಿಂದನೆಯ ಕವಲೊಡೆದ ಚರ್ಚೆಗೆ ನನ್ನ ಪ್ರತಿಕ್ರಿಯೆ
  • ಎಸ್ ಎಲ್ ಭೈರಪ್ಪನವರ ‘ಕವಲು’ : ಹಳಸಲು ವಿಚಾರಗಳ ತೆವಲು
  • ಕಟಿನ್: `ಭೀಕರ’ವೂ ಕ್ಷುಲ್ಲಕವಾದ ಆ ಕ್ಷಣಗಳು…
  • ರೈನ್‌ಮ್ಯಾನ್ (೧೯೮೮) : ದಿವ್ಯಜ್ಞಾನಿ ಕಿಮ್ ಪೀಕ್ ಇನ್ನಿಲ್ಲ
  • ಅವತಾರ್ : ಅ‘ಮರ’ ಕಥೆಯ ಅದ್ಭುತ ನೇಯ್ಗೆ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಗ್ರಾನ್ ಟೊರಿನೋ : ಕ್ಲೈಂಟ್ ಈಸ್ಟ್‌ವುಡ್‌ನ ಕೊನೇ ಪರ್ಫೆಕ್ಟ್ ಫ್ರೇಮ್ !
  • ಕ್ರಿಸ್: ನಿನ್ನಿಂದ ನಾವು ಕಲಿಯೋದು ತುಂಬಾ ಇದೆ !
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಡಿಸ್ಟ್ರಿಕ್ಟ್ ೯ : ಈ ವರ್ಷದ ರಮ್ಯ, ಅದ್ಭುತ, ನೈಜ ಸಿನೆಮಾ
  • ಹ್ಯಾನಿಬಾಲ್ ಲೆಕ್ಟರ್: ಆಂಥೋನಿ ಹಾಪ್‌ಕಿನ್ಸ್‌ನ ರೌದ್ರಾವತಾರ
  • A Beautiful mind : ಬೆಟ್ಟದಂಥ ಕಥೆ ; ಇಲಿಯಂತ ಸಿನಿಮಾ
  • ಫಿಲಿಪೋಸ್ ಬರೆದ ಹಡಗಿನ ಕಥನಗಳು : ಜಸ್ಟ್ ಅನ್‌ಪುಟ್‌ಡೌನಬಲ್ !
  • ನನ್ನ ಫೇವರಿಟ್ ಹಾಲಿವುಡ್ ಸಿನಿಮಾಗಳು
  • ವುಮೆನ್ ಟ್ರಾಫಿಕಿಂಗ್ ಕುರಿತ ಎರಡು ಸಿನೆಮಾಗಳು : ವೆಲ್ ‘ಟೇಕನ್’ : ಬೆಸ್ಟ್ ‘ಟ್ರೇಡ್’
  • ಎಂಪೈರ್‍ಸ್ ಆಫ್ ದಿ ಇಂಡಸ್: ಥ್ರಿಲ್ಲರ್ ಪ್ರವಾಸಕಥನ : ಪರಿಚಯ ಭಾಗ ೧
  • ‘ದಿ ಕ್ಯೂಬ್’ ಸರಣಿ ಚಿತ್ರಗಳು: ದಿಕ್ಕೆಟ್ಟ ಬದುಕಿಗೆ ಆರೇ ಬಾಗಿಲು
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.